ರಾಜ್ಯ ಪ್ರಶಸ್ತಿಗೆ ಅರ್ಜಿಯೇ ಮಾನದಂಡವಲ್ಲ: ಸಾಮಗ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ನವ೦ಬರ್ 10 , 2013
|
ರಾಜ್ಯ ಪ್ರಶಸ್ತಿಗೆ ಅರ್ಹರು ಅರ್ಜಿ ಸಲ್ಲಿಸುವುದು ಈ ನಿಟ್ಟಿನ ಆಯ್ಕೆ ಸಮಿತಿಯ ಮಾಹಿತಿಗಾಗಿ ಅಗತ್ಯ. ಹಾಗೆಂದು ಅರ್ಜಿದಾರರು ನೀಡಿದ ಎಲ್ಲ ಮಾಹಿತಿ ಸತ್ಯವೇ ಅಸತ್ಯವೇ ಎಂದು ಪರಿಶೀಲಿಸುವುದು ಆಯ್ಕೆದಾರರಿಗೆ ಬಿಟ್ಟ ವಿಚಾರವಾಗಿದ್ದು, ಅರ್ಜಿ ಆಧರಿಸಿ ಎಂದೂ ಪ್ರಶಸ್ತಿ ದೊರೆಯುವುದಿಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ನಿಕಟ ಪೂರ್ವ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ ಹೇಳಿದರು.
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪಡೆದ ಯಕ್ಷಗಾನ ಕಲಾವಿದ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ್ ಅವರಿಗೆ ಶನಿವಾರ ಕೃಷ್ಣಾಪುರದಲ್ಲಿ ನೀಡಲಾದ ನಾಗರಿಕ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿಯ ಎಲ್ಲ ರಾಜ್ಯ ಪ್ರಶಸ್ತಿಗಳು ಅರ್ಹರಿಗೆ ಸಿಕ್ಕಿವೆ. ಇದಕ್ಕಾಗಿ ಆಯ್ಕೆ ಸಮಿತಿಗೆ ತಾನು ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.
ಅಭಿನಂದನಾ ಭಾಷಣ ಮಾಡಿದ ಪ್ರಸಿದ್ಧ ಯಕ್ಷಗಾನ ಕಲಾವಿದರ ಉಜಿರೆ ಅಶೋಕ ಭಟ್, ಯಕ್ಷಗಾನಕ್ಕೆ ದೊಡ್ಡ ಕೊಡುಗೆ ನೀಡಿದ ಗಡಿನಾಡು ಕಾಸಗೋಡಿನಿಂದ ಬಂದಿರುವ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು, ಯಾವುದೇ ಪಾತ್ರ ಅಶ್ಲೀಲಗೊಳಿಸದೆ, ವಿಟ್ಲ, ಜೋಷಿ, ಕೊಡಕ್ಕಲ್ ಮೊದಲಾದ ಶ್ರೇಷ್ಟ ಭಾಗವತರ ಸಾಲಿನಲ್ಲಿ ನಿಲ್ಲುವ ಭಾಗವತ ಎಂದು ಗುರುತಿಸಲ್ಟಟ್ಟವರು ಎಂದರು.
ಸನ್ಮಾನಕ್ಕೆ ಉತ್ತರಿಸಿದ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ್, ಇಂದು ತನ್ನ ಬದುಕಿನಲ್ಲಿ ಅತ್ಯಂತ ಸಂತಸದ ದಿನ. ಅಭಿಮಾನಿಗಳ ಪ್ರೀತಿಗೆ ತಾನು ಚಿರಋಣಿ ಎಂದರು. ಕಟೀಲು ವಾಸುದೇವ ಅಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಪೊರೇಟರ್ ತಿಲಕ್ರಾಜ್ ಕೃಷ್ಣಾಪುರ ಮಾತನಾಡಿದರು. ಜ್ಯೋತಿಷಿ ನಾಗೇಂದ್ರ ಭಾರಧ್ವಜ್ ಶುಭ ಹಾರೆಸಿದರು.
ಸನ್ಮಾನ ಪತ್ರವನ್ನು ಯುವಕ ಮಂಡಲದ ಪ್ರ್ರೆದಾನ ಕಾರ್ಯದರ್ಶಿ ರಾಕೇಶ್ ಕೋಟ್ಯಾನ್ ವಾಚಿಸಿದರು. ಸಂಘ ಸಂಸ್ಥೆಗಳ ಪಟ್ಟಿಯನ್ನು ಗೌರವಾಧ್ಯಕ್ಷ ಪಿ. ಸುಧಾಕರ ಕಾಮತ್ ವಾಚಿಸಿದರು.
ನಾಗರಿಕಸನ್ಮಾನ ಸಮಿತಿ, ರಾಜ್ಯ ಪ್ರಶಸ್ತಿ ವಿಜೇತ ಕಷ್ಣಾಪುರ ಯುವಕ ಮಂಡಲ, ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯುವಕ ಮಂಡಲ ಅಧ್ಯಕ್ಷ ನಾಗೇಶ್ ಬಂಗೇರ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಅಣ್ಣಪ್ಪ ದೇವಾಡಿಗ, ಉದ್ಯಮಿ ಸುನಿಲ್ ಸುವರ್ಣ ಉಪಸ್ಥಿತರಿದ್ದರು. ಯುವಕ ಮಂಡಲದ ಕಟ್ಟಡ ನವೀಕರಣ ಸಮಿತಿ ಅಧ್ಯಕ್ಷ ಪಿ. ಸದಾಶಿವ ಐತಾಳ್ ಸ್ವಾಗತಿಸಿದರು.
ನೆಲ್ಲಿಕಟ್ಟೆ ಅವರಿಗೆ ಅಭಿನಂದನಾ ಪತ್ರ, ಯಕ್ಷಗಾನದ ಮುಖವಾಡವಿರುವ ಸ್ಮರಣಿಕೆ ನಗದು ನಿಧಿ ನೀಡಿ ಪುರಸ್ಕರಿಸಲಾಯಿತು. ಸಂಘ ಸಂಸ್ಥೆಗಳಿಂದ ಹಾರಾರ್ಪಣೆ ನಡೆಯಿತು. ಜ್ಯೋತಿಷಿ ಮಹೇಶ್ ಮೂರ್ತಿ, ಕಾರ್ಯಕ್ರಮ ನಿರ್ವಹಿಸಿದರು. ಪ್ರಸಿದ್ಧ ಕಲಾವಿದರಿಂದ ಶ್ವೇತ ಕುಮಾರ ಚರಿತ್ರೆ ಯಕ್ಷಗಾನ ಬಯಲಾಟ ನಡೆಯಿತು.
ಕೃಪೆ : http://www.vijaykarnataka.com
|
|
|